ಸೋಮವಾರ, ಆಗಸ್ಟ್ 13, 2012

ಸಣ್ಣ ಸಣ್ಣ ಸಂಗತಿಗಳ ನಡುವೆ ಅಡಗಿರುವ ಖುಷಿ, ಸಡಗರ, ತೃಪ್ತಿ - ಒಂದು ಅವಲೋಕನ

 ಆಗ ತಾನೇ ಸಣ್ಣಗೆ ಸುರಿದು ನಿಂತ ಸೋನೆ ಮಳೆ. ಸಂಜೆಯ ಹೊತ್ತು. ಮೈ ಬಿಸಿಯ ಜೊತೆ ಗುದ್ದಾಡಲು ಬೀಸುತ್ತಿರುವ ತಂಗಾಳಿ. ಸುಂಗಂಧವ ತನ್ನೆದೆಯಿಂದ ತೇಲಿಬಿಟ್ಟಂತೆ ಘಮಘಮಿಸುತ್ತಿರುವ ಭೂಮಿ. ಇವುಗಳ ಜೊತೆ ಚಳಿ ಕೊಲ್ಲಲು ತಿನ್ನೋ ರಸ್ತೆ ಬದಿಯ ಮೆಣಸಿನಕಾಯಿ ಬಜ್ಜಿಯಿಂದ ಸಿಗೋ ಖುಷಿ ಅನುಭವಿಸಿದವರಿಗೇ ಅರ್ಥವಾಗೋದು. ಬಜ್ಜಿಯ ಬೆಲೆ ಕಡಿಮೆಯಾದರೂ ಆ ಕ್ಷಣದ ಸುಖಕ್ಕೆ ಬೆಲೆ ಕಟ್ಟಲಾಗದು.

ಮುಂಜಾನೆಯಲಿ ಪತ್ರಿಕೆ ಓದುತ್ತಾ ಹೀರೋ ಕಾಫಿಯಿಂದ ಸಿಗೋ ಮಜಾ ಯಾವ ಕಾಫಿ ಡೇನಲ್ಲಿ ಸಿಗತ್ತೆ ಹೇಳಿ. ಸುಡೋ ನೆತ್ತಿಯ ಓಲೈಸಲು ಕುಡಿಯೋ ಮಸಾಲಭರಿತ ಮಜ್ಜಿಗೆಯನ್ನ, ಬಹುರಾಷ್ಟ್ರೀಯ ಕಂಪನಿಗಳು ತಯಾರಿಸುವ, ಯಾವ ಪಾನೀಯಗಳಿಂದಲೂ ಬಯಸಲಾಗುವುದಿಲ್ಲ.

ಅಮ್ಮನ ಅಕ್ಕರೆಯ ಮಡಿಲಿನಲ್ಲಿ ಮಲಗಿ ಪಡೆದ ಸುಖ, ಅಪ್ಪನ ಜೊತೆ ತೊಡಗಿ ಮುಳುಗಿಹೋದ ಸ್ನೇಹಭರಿತ ಚರ್ಚೆಗಳು ನೀಡೋ ತಿಳುವಳಿಕೆ, ಒಡಹುಟ್ಟಿದವರೊಡನೆ ಕಿತ್ತಾಡಿ, ಗುದ್ದಾಡಿ ಹಲವನ್ನ ನಮ್ಮದಾಗಿಸಿಕೊಂಡ ಕ್ಷಣಗಳು, ನೆರೆಹೊರೆಯವರಲ್ಲಿ ಬೆರೆತುಹೊದಾಗ ಎಲ್ಲರೂ ನಮ್ಮವರು ಎಂದು ಮೂಡುವ ಭಾವನೆಗಳು, ಯಾರ ಜೀವನದಲ್ಲಿ ಸಂಭವಿಸುವುದಿಲ್ಲವೋ ಅವರದೊಂದು ಅಪೂರ್ಣ ಜೀವನವೇ ಸರಿ.

ಒಂದು ಹುಡುಗಿಯ ನೋಡಿ ಮನಸ್ಸಿಗೆ ಅರಿವಿಲ್ಲದೆ ಮೂಡೋ ಆಸಕ್ತಿ, ಮಾತಾಡಿಸಬೇಕೆಂಬ ಚಡಪಡಿಕೆ, ಕಂಡಗಲೆಲ್ಲಾ ಆಗುವ ತೊಳಲಾಟಗಳು, ಮನಸ್ಸಲ್ಲೆಲ್ಲಾ ಕವಿತ್ವ ತುಂಬಿ, ಕನಸುಗಳು ಕಲ್ಪನೆಗಳಿಗೆ ಮೀಸಲಾಗಿ, ಏನೇನೋ ಕುತೂಹಲಗಳು ತುಂಬುವ ಆ ಸಂಧರ್ಭಗಳನ್ನ ವರ್ಣಿಸಲು ಬಹಳ ಕಷ್ಟ ಕಣ್ರೀ. ಬಹುಷಃ ಕಾಳಿದಾಸನಿಂದ  ಮಾತ್ರ ಆಗುತ್ತೋ ಏನೋ.ಏನೇ ಆಗ್ಲಿ ಇದನ್ನೆಲ್ಲಾ ಅನುಭವಿಸೋದು ಪ್ರತಿಯೊಬ್ಬ ಹುಡುಗರ ಆ ಜನ್ಮ ಸಿದ್ಧ ಹಕ್ಕು ಎನ್ನೋದು ನನ್ನ ಭಾವನೆ. ನಂಬಿ, ಹುಡುಗಿಯರಿಗೆ ಹೇಗೆ ಅನ್ನಿಸುತ್ತದೋ ನನಗೆ ತಿಳಿಯದು.

ಮೆಲ್ಲಗೆ ಕೇಳುವಂತೆ ಗಝಲ್ ಅಥವಾ light music ಮೊಳಗುವಂತೆ ಮಾಡಿ, ಕೊನೆಯ ಮೂಲೆಯಲಿ ಹಚ್ಚಿಟ್ಟ ಮೇಣದ ಬತ್ತಿಯ ಬೆಳಕಿನಲ್ಲಿ, ಸ್ನೇಹಿತರೊಡಗೂಡಿ ಒಳಗಿಳಿಸುವ  ಪವಿತ್ರ ತೀರ್ಥ ತಂದುಕೊಡುವ ಆ ಕ್ಷಣದ ನೆಮ್ಮದಿ, ಈ ಜೀವನ ನಶ್ವರ ಅಂಥಾ ಯಾವನ್ರೀ ಹೇಳಿದ್ದು ಎಂದು ಎದೆ ತಟ್ಟಿ ಕೆಳುವಂತಾಗತ್ತೆ. ನಿಜವಾಗಲೂ ನಿಮ್ಮ ನಿಮ್ಮ ದೇವರಾಣೆಗ್ಲೂ ಯಾವ ಪಬ್, ಬಾರ್ಗಳಲ್ಲೂ   ಆ ರೀತಿಯ ಆನಂದ ಸಿಗೋಲ್ಲ ಬಿಡಿ.

ಆದರೆ ಯಾಕೋ ಈಗೀಗ ನಮ್ಮೆಲ್ಲರ ಜೀವನ ನಮ್ಮ ಕೈಮೀರಿ ದಾಟಿದೆ ಎನಿಸುತ್ತಿದೆ. ಕಾಲ ತನ್ನೊಳಗೆ ನಮ್ಮನ್ನೆಲ್ಲಾ ಬಂಧಿಸಿ ಎಲ್ಲಿಗೋ ಕರೆದೊಯ್ಯುತ್ತಿದೆ ಅನ್ನಿಸುತ್ತಿದೆ. ಇತ್ತ ಸ್ವಂತ ಸಂಸ್ಕೃತಿಯನ್ನು ಉಳಿಸಿಕೊಳ್ಳಲಾಗದೇ, ಅತ್ತ ಬೇರೆ ಸಂಸ್ಕೃತಿಗೆ ಸಂಪೂರ್ಣವಾಗಿ ಒಗ್ಗಿಕೊಳ್ಳಲಾಗದೆ ಎಡಬಿಡಂಗಿ ಅವಸ್ಥೆಯಲ್ಲಿ ಬದುಕು ರೂಪುಗೊಂಡಿದೆಯೇನೋ. ಈ ಹೊಸ ಜೀವನ ಶೈಲಿಗೆ ಎಲ್ಲರೂ ಒಗ್ಗಿಕೊಳ್ಳಬೇಕಾಗಿರುವುದು  ವಿಪರ್ಯಾಸವೇ ಸರಿ.

ಇತ್ತೀಚಿಗೆ ಫೇಸ್ಬುಕ್ನಲ್ಲಿ   ಓದಿದ ನೆನಪು. ಹೀಗಿತ್ತು ಆ ವ್ಯಾಖ್ಯಾನ 'ನಾವು ಮಕ್ಕಳಿದ್ದಾಗ ಯಾವಾಗಲೂ ಅಳುತಿದ್ದೆವು, ಆದರೆ ಮನಸ್ಸಿನ ತುಂಬಾ ಖುಷಿಯಿತ್ತು. ಅಲ್ಲಿ ಮುಗ್ಧತೆ ಹಾಸು ಹೊಕ್ಕಾಗಿತ್ತು. ದೊಡ್ಡವರಾದ ಮೇಲೆ ಹೊರಗಡೆ ಯಾವಾಗಲೂ ನಗುತ್ತಿರುತ್ತೇವೆ, ಆದರೆ ಮನಸ್ಸಿನೊಳಗೆ ದುಃಖ, ಅತೃಪ್ತಿ ತುಂಬಿರುತ್ತದೆ. ಇದು ನೂರಕ್ಕೆ ನೂರು ಪ್ರತಿಶತ ನಿಜ. ಕೊಂಚವೂ ಮುಗ್ಧತೆಯಿಂದ ಕೂಡಿರದ ಮನಸ್ಸು ಈ  ರೀತಿ ಸಣ್ಣ ಸಣ್ಣ ಸಂಗತಿಗಳಲ್ಲಿ ಅಡಗಿರುವ ಖುಷಿಯನ್ನು ಕಳೆದುಕೊಳ್ಳೋದು ಖಂಡಿತ.     

ಕೊನೆಯದಾಗಿ ಒಂದು ಮಾತು, ನಮ್ಮದಾಗಿಸಿಕೊಂಡ ಪ್ರತಿ ಖುಷಿಯ ಕ್ಷಣಗಳಲ್ಲಿ ನೊಂದವರು, ನಿರ್ಗತಿಕರು  ಭಾಗಿಯಾದಲ್ಲಿ, ನಾವು ಅನುಭವಿಸೋ ಪ್ರತಿ ಕ್ಷಣಕ್ಕೂ ನಿಜವಾದ ಅರ್ಥ ಬರಬಹುದು.