ಬುಧವಾರ, ಸೆಪ್ಟೆಂಬರ್ 28, 2011

Feel the joy of giving ಎಂದ ಮಹಾನುಭಾವ

ಹೆಚ್ಚೆಂದರೆ ಸಾಮಾನ್ಯರಾದ ನಾವುಗಳು ನೊಂದವರ ಅಭ್ಯದಯಕ್ಕೆ ಏನನ್ನ ನಮ್ಮ ಜೀವನದಲ್ಲಿ ತ್ಯಾಗ ಮಾಡಬಹುದು? ಹೆಚ್ಚಿನ ಜನರ ಕಣ್ಣೆದುರಿಗೆ ಬರುವುದು ನಿರ್ಜೀವ ವಸ್ತುಗಳು ಮಾತ್ರ. ಆದರೆ ಇಡೀ ಜೀವನವನ್ನು ಪರರ ಅಭ್ಯುದಯಕ್ಕಾಗಿ ಮೀಸಲಿಡುವವರು ಕೆಲವರಲ್ಲಿ ಕೆಲವರು ಮಾತ್ರ. ಮತ್ತೊಬ್ಬರ ಒಳ್ಳೆಯದಕ್ಕಾಗಿ ಒಂದು ಹೆಜ್ಜೆ ಮುಂದೆ ಹೋಗಿ ಜೀವವನ್ನ ಕಳೆದುಕೊಳ್ಳಬಹುದು ಆದರೆ ಇಡೀ ಜೀವನವನ್ನು ಬೇರೆಯವರಿಗಾಗಿ ಕಳೆಯುವುದು ಕೆಲವು ಮಂದಿಗೆ ಮಾತ್ರ ಸಾಧ್ಯ. ತನ್ನ ಸ್ವಾರ್ಥ, ಆಸೆ, ಆಕಾಂಕ್ಷೆ, ಸ್ವಂತ ಕುಟುಂಬದ ಹಿತಾಸಕ್ತಿಗಳನ್ನು ಬದಿಗಿಟ್ಟು ಮಾನಸಿಕವಾಗಿ ಅಸ್ವಸ್ಥರಾಗಿರುವವರ, ದೈಹಿಕವಾಗಿ ಕುಗ್ಗಿರುವವರ, ಆರ್ಥಿಕವಾಗಿ ನಿರ್ಗತಿಕರಾಗಿರುವವರ, ಸಾಮಾಜಿಕವಾಗಿ ದೂಡಲ್ಪಟ್ಟಿರುವವರ, ಪ್ರಜಾಪ್ರಭುತ್ವದ ದೇಶದಲ್ಲಿ ತಮ್ಮೆಲ್ಲ ಹಕ್ಕುಗಳಿಂದ ವಂಚಿತರಾಗಿರುವವರ ಉನ್ನತಿಕರಣಕ್ಕೆ ಕಳೆದ ೮ ವರ್ಷಗಳಿಂದ ಶ್ರಮಿಸುತ್ತಿದ್ದಾರೆ ಮಧುರೈನ ನಾರಾಯಣನ್ ಕೃಷ್ಣನ್ ಎಂಬ ಮಹಾನುಭಾವ..!!

ಆರ್ಥಿಕವಾಗಿ ಅಷ್ಟೇನೂ ಶ್ರೀಮಂತರಲ್ಲದ ಒಂದು ಸ್ಟಾರ್ ಹೋಟೆಲ್ ನಲ್ಲಿ ಮುಖ್ಯ ಬಾಣಸಿಗನಾಗಿ ಕೆಲಸ ನಿರ್ವಹಿಸುತ್ತಿದ್ದ ಕೃಷ್ಣನ್ ಗೆ ವಿದೇಶದಲ್ಲಿ ಕೆಲಸದ ಆಹ್ವಾನ ಬರುತ್ತದೆ. ಎಲ್ಲ ರೀತಿಯಲ್ಲೂ ಸನ್ನದ್ಧರಾಗಿ ಹೊರಡುವ ಸಂದರ್ಭದಲ್ಲಿ ಆಕಸ್ಮಾತಾಗಿ ಕಣ್ಣಿಗೆ ಬೀಳುವ ದೃಶ್ಯ ಅವರ ಇಡೀ ಜೀವನವನ್ನೇ ಬದಲಿಸಿಬಿಡುತ್ತದೆ. ಮಾನಸಿಕ ಅಸ್ವಸ್ಥನಾಗಿರುವ ಒಬ್ಬ ವ್ಯಕ್ತಿ ತನ್ನ ಮಲವನ್ನ ತಾನೇ ತಿನ್ನುತ್ತಿದ್ದ ದೃಶ್ಯ ಅವರ ಕಣ್ಣಿಗೆ ಬೀಳುತ್ತದೆ. ತಕ್ಷಣ ಪಕ್ಕದ ಹೋಟೆಲ್ ನಿಂದ ಇಡ್ಲಿ ಕಟ್ಟಿಸಿಕೊಂಡು ಬಂದು ಆತನ ಕೈಗಿಡುತ್ತಾರೆ. ಅವರು ಹೇಳುವ ಪ್ರಕಾರ ಅಷ್ಟು ವೇಗವಾಗಿ ಒಬ್ಬ ಮನುಷ್ಯ ಊಟ ಮಾಡಿದ್ದನ್ನ ಅವರೆಂದಿಗೂ ಕಂಡಿರಲಿಲ್ಲವಂತೆ. ಊಟ ಮುಗಿಸಿದಾತ ಹೊಟ್ಟೆ ತುಂಬಿಸಿದಾತನಿಗೆ ಧನ್ಯವಾದ ಅರ್ಪಿಸುವ ರೀತಿಯಲ್ಲಿ ಕೃಷ್ಣನ್ ರ ಕೈ ಹಿಡಿಯುತ್ತಾನೆ. ಆತನ ಕೃತಜ್ಞತಾಪೂರ್ವಕ ಸ್ಪರ್ಶ ಕೃಷ್ಣನ್ ರಿಗೆ ಅದ್ಭುತ ಅನುಭವವನ್ನ ನೀಡುತ್ತದೆ. ಯಾವ ಸಕಲ ಅಷ್ಟ ಐಶ್ವರ್ಯಗಳೂ ನೀಡದ ತೃಪ್ತಿ ನೀಡುತ್ತದೆ. ಮನಸ್ಸಿಗೆ ಸುಖ ನೆಮ್ಮದಿಯನ್ನ ನೀಡುತ್ತದೆ. ಅಂದಿನ ಅವರ ಅನುಭವ ತಮ್ಮ ಇಡೀ ಜೀವನವನ್ನ ಬಹಳ ಅರ್ಥಪೂರ್ಣವಾಗಿ ಕಳೆಯಲು ಪ್ರೇರೇಪಿಸುತ್ತದೆ.

ಸುಮಾರು ೮ ವರ್ಷಗಳ ಹಿಂದೆ ಆರಂಭವಾದ ಕೃಷ್ಣನ್ ರ ಅಕ್ಷಯ ಟ್ರಸ್ಟ್ ೧.೭ ಮಿಲಿಯನ್ನಷ್ಟು ಊಟವನ್ನ ನಿರ್ಗತಿಕರಿರುವೆಡೆಗೆ ತಲುಪಿಸಿದೆ. ತಮ್ಮ ಮನೆಯೇ ಅಧಿಕೃತ ಕಾರ್ಯಾಲಯವಾಗಿದೆ, ಅಡುಗೆಮನೆಯಾಗಿದೆ. ಅವರದೇ ಸ್ವಂತ ದುಡ್ಡಿನಿಂದ ಪ್ರತಿದಿನ ಅಡುಗೆ ಮಾಡಿ ತಮ್ಮ ವ್ಯಾನ್ ನಲ್ಲಿ ಇಟ್ಟುಕೊಂಡು ಮಾನಸಿಕ ಅಸ್ವಸ್ಥರನ್ನ ಹುಡುಕಿ, ಊಟ ಮಾಡಿಸಿ ಬರುವುದು ವಾಡಿಕೆಯಾಗಿದೆ. ಅಷ್ಟೇ ಅಲ್ಲದೆ ಅವರಿಗೆ ಸ್ನಾನ ಮಾಡಿಸುವುದು, ಹೇರ್ ಕಟ್ ಮಾಡುವುದು, ಊಟ ತಿನ್ನಿಸುವುದು ಎಲ್ಲವನ್ನೂ ತಾಯಿ ಮಕ್ಕಳಿಗೆ ಮಾಡುವಷ್ಟು ಪ್ರೀತಿ, ಅಕ್ಕರೆ, ಕಾಳಜಿಯಿಂದ ಮಾಡುತ್ತಾ ಬಂದಿದ್ದಾರೆ. ಎಷ್ಟೋ ಬಾರಿ ಮಾನಸಿಕ ಅಸ್ವಸ್ಥರಿಂದ ಒದೆ ತಿಂದದ್ದು ಉಂಟು.

ಸತತ ೮ ವರ್ಷಗಳಿಂದ ವಿಶ್ರಮಿಸದೆ ದುಡಿಯುತ್ತಿರುವ ಕೃಷ್ಣನ್ ಇಂದು ಅಕ್ಷಯ ಟ್ರಸ್ಟ್ ನ್ನು ಬೃಹದಾಕಾರವಾಗಿ ಬೆಳೆಸಿದ್ದಾರೆ. ನಿಸ್ವಾರ್ಥ ದಾನಿಗಳಿಂದ ಹಣ ಸಂಗ್ರಹಿಸಿ ನಿರ್ಗತಿಕರಿಗೆ ವಸತಿ ಕಲ್ಪಿಸುವ ಮಹತ್ತರ ಯೋಜನೆಯನ್ನು ಯಶಸ್ವಿಯಾಗಿ ಮುಗಿಸುವ ಹಂತಕ್ಕೆ ತಲುಪಿದ್ದಾರೆ. ಸುಮಾರು ೪೦೦ ಮಾನಸಿಕ ರೋಗಿಗಳಿಗೆ ಉಳಿಯಲು ಜಾಗ, ಶುಶ್ರೂಷೆಗೆ ಆಸ್ಪತ್ರೆ, ಸುಸಜ್ಜಿತ ಊಟದ ಶಾಲೆಗಳನ್ನೊಳಗೊಂಡ ಬೃಹತ್ ಕಟ್ಟಡವನ್ನು ಮುಗಿಸುವ ಹಂತದಲ್ಲಿದ್ದಾರೆ.

ಉತ್ತಮ ವಿದ್ಯಾವಂತನಾಗಿ ವಿದೇಶದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕರೂ ಎಲ್ಲರಿಂದ ದೂಷಿಸಲ್ಪಡುವ ಮಾನಸಿಕ ರೋಗಿಗಳ ಸೇವೆಗೆ ಕೃಷ್ಣನ್ ಪಣ ತೊಟ್ಟಿದ್ದಾರೆ. ಇಂದು ಇಡೀ ಜಗತ್ತಿನಲ್ಲಿ ಲಕ್ಷಾಂತರ NGO ಗಳು ಕಾರ್ಯನಿರ್ವಹಿಸುತ್ತಿವೆ. ಬಡವರ, ನಿರ್ಗತಿಕರ, ರೋಗಿಗಳ ಅಭ್ಯುದಯವೇ ನಮ್ಮ ಮೂಲ ಉದ್ದೇಶ ಎಂಬ ಹಣೆಪಟ್ಟಿಯೊಂದಿಗೆ ಸುಲಿಗೆ ಮಾಡುತ್ತಿವೆ. ಸರಕಾರದಿಂದ ಜಾರಿಯಾಗುವಂತಹ ಪ್ರಾಜೆಕ್ಟ್ ಗಳನ್ನ ಭ್ರಷ್ಟ ಅಧಿಕಾರಿಗಳ ಜೊತೆ ಸೇರಿ ಪಡೆದುಕೊಂಡ ಹಣದ ದುರ್ಬಳಕೆ ಮಾಡುತ್ತಿದ್ದಾರೆ. ಎಷ್ಟೋ NGO ಗಳು ಖಾಸಗಿ ಕಂಪನಿಗಳಲ್ಲಿ, ಸರಕಾರೀ ಕಛೇರಿಗಳಲ್ಲಿ ಕೆಲಸ ಮಾಡುವ ನೌಕರರಿಂದಲೂ ತಿಂಗಳಿಗೆ ಇಂತಿಷ್ಟು ಹಣ ಎಂದು ವಸೂಲಿ ಮಾಡುತ್ತಾರೆಯೇ ಹೊರತು ಅದರ ಸದ್ವಿನಿಯೋಗ ಮಾಡಿಕೊಳ್ಳುವ ಗೋಜಿಗೆ ಹೋಗುತ್ತಿಲ್ಲ (ನನಗೂ ಹಾಗೂ ನನ್ನ ಸ್ನೇಹಿತರಿಗೂ ಆದ ಅನುಭವದ ಆಧಾರದ ಮೇಲೆ). NGO ಗಳು ದಾನದ ರೂಪದಲ್ಲಿ ಗಳಿಸುವ ಹಣದ ಲೆಕ್ಕ ಯಾರಿಗೂ ಕೊಡಬೇಕಾದ ಅವಶ್ಯಕತೆ ಇಲ್ಲದಿರುವುದನ್ನು ದುರುಪಯೋಗ ಮಾಡಿಕೊಂಡು ದೊಡ್ಡ ದಂಧೆ ಮಾಡುತ್ತಿದ್ದಾರೆ. ಇಂತಹ NGO ಗಳ ಮುಂದೆ ಕೃಷ್ಣನ್ ರ ಅಕ್ಷಯ ಟ್ರಸ್ಟ್ ಅಪವಾದವಾಗಿ ನಿಲ್ಲುತ್ತದೆ.

CNN IBN ನಡೆಸಿದ Top Ten Real Heroes ಕಾರ್ಯಕ್ರಮದಲ್ಲಿ ಪ್ರಪಂಚದ ಮೂಲೆ ಮೂಲೆಗಳಿಂದ ಪಾಲ್ಗೊಂಡಿದ್ದ ಲಕ್ಷಾಂತರ ಜನರ ನಡುವೆ ಸ್ಪರ್ಧಿಸಿ ಕೃಷ್ಣನ್ Top Ten Real Hero ಆಗಿ ಹೊರ ಹೊಮ್ಮಿದ್ದಾರೆ. ಆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದ ಆಮೀರ್ ಖಾನ್ ಕೃಷ್ಣನ್ ರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಗೌರವಿಸಿದ್ದಾರೆ. ಸಮಾಜದ ಸ್ವಾಸ್ಥ್ಯ ಹದಗೆಟ್ಟರೆ ಅದಕ್ಕೆ ಬೇರೆಯವರು ಕಾರಣರಲ್ಲ. ಕಾರಣಕರ್ತರು ನಾವೇ. ಉತ್ತಮ ಶಿಕ್ಷಣ ಪಡೆದು ಸಾರ್ವಜನಿಕವಾಗಿ ವಿದ್ಯಾವಂತರೆನಿಸಿಕೊಂಡರಷ್ಟೇ  ಸಾಲದು, ನಮ್ಮ ನಮ್ಮ ಕರ್ತವ್ಯಗಳನ್ನರಿತು ಅದನ್ನು ಪಾಲಿಸಬೇಕಾಗಿದೆ. ಕೃಷ್ಣನ್ ರಂತೆ ಸಾಕಷ್ಟು ಜನ ಟ್ರಸ್ಟ್ ಗಳನ್ನ ನಡೆಸುತ್ತಿದ್ದಾರೆ. ಅಂತಹವರಿಗೆ ನಾವೆಲ್ಲಾ ಬೆನ್ನೆಲುಬಾಗಿ ನಿಲ್ಲಬೇಕಾಗಿದೆ. ಆಗ ಮಾತ್ರ ಸ್ವಾಸ್ಥ್ಯಭರಿತ ಪರಿಸರದ ನಿರ್ಮಾಣ ಸಾಧ್ಯ.

ಕೃಷ್ಣನ್ ಒಬ್ಬ ಬ್ರಾಹ್ಮಣರು, ವಿದ್ಯಾವಂತರು ಮೇಲಾಗಿ ಉತ್ತಮ ಮನಸ್ಸುಳ್ಳವರು. ಆದರೆ ಅವರು ಸಮಾಜ ಸೇವೆಯಲ್ಲಿ ತೊಡಗಿರುವುದೇ ಅವರಿಗೆ ಮುಳ್ಳಾಗಿ  ಪರಿಣಮಿಸಿದೆ. ಅವರ ಕೆಲಸ ನಮಗೆಲ್ಲಾ ಆದರ್ಶವಾಗಿ ಕಾಣುತ್ತಿದೆ. ಆದರೆ ಅವರನ್ನು ವರಿಸಲು ಒಬ್ಬ ಮಹಿಳೆಯೂ ಮುಂದೆ ಬಂದಿಲ್ಲ. ಆತ ಮಾಡುವ ಕೆಲಸಗಳಿಗೆ ನಾನು ಬೆಂಬಲ ಕೊಡುತ್ತೇನೆ ಎಂಬ ಮನಸು ಸಿಕ್ಕಿಲ್ಲ. ಯಾವುದೇ ವ್ಯಕ್ತಿ ಆತ ಗಂಡಾಗಲಿ, ಹೆಣ್ಣಾಗಲಿ ಆಸರೆಯೆಂಬುದು ಬೇಕಾಗುತ್ತದೆ. ಆಸ್ಥೆಯಿಂದ ಪ್ರೀತಿಸುವವರು ಬೇಕಾಗುತ್ತಾರೆ. ಜೀವನದ ಪಯಣದಲ್ಲಿ ಒಂದಲ್ಲ ಒಂದು ದಿನ ಒಂಟಿತನ ಕಾಡುತ್ತದೆ. ಕೊನೆಗೊಂದು ದಿನ ಜೀವನವೇ ಬೇಡವೆನಿಸುತ್ತದೆ. ಅಂತಹ ಮಾನಸಿಕ ಖಿನ್ನತೆಗೆ ಮನಸ್ಸು ಬಲಿಯಾಗಬಾರದೆಂದರೆ ಒಬ್ಬ ಸಂಗಾತಿ ಬೇಕಾಗುತ್ತದೆ.

ಮದರ್ ತೆರೇಸಾ ಕುಷ್ಟ ರೋಗಿಗಳನ್ನು ಪಾಲಿಸಿ, ಪೋಷಿಸಿ ತಮ್ಮ ಆಯುಷ್ಯವನ್ನೆಲ್ಲಾ ಅವರಿಗಾಗಿ ಮೀಸಲಿಟ್ಟಿದ್ದರು ಎಂಬುದನ್ನು ಕೇಳಿದ್ದೆವು. ಇಲ್ಲೊಬ್ಬ, ಮಾನಸಿಕ ಅಸ್ವಸ್ಥರ ಶ್ರೇಯೋಭಿವೃದ್ದಿಗೆ ಇಡೀ ಜೀವನವನ್ನು ಮುಡಿಪಿಟ್ಟುರುವುದನ್ನು ನೋಡುವ ಭಾಗ್ಯ ನಮ್ಮದಾಗಿದೆ.

ವಿಜಯಕರ್ನಾಟಕ ದಿನ ಪತ್ರಿಕೆಯಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದ ವಿಶ್ವೇಶರ ಭಟ್ ಕೃಷ್ಣನ್ ರನ್ನು ಕುರಿತು 'ಮಧುರೈನ ಸಂತೆಯೊಳಗೊಬ್ಬ ಸಂತ' ಎಂಬ ಲೇಖನ ಬರೆದ್ದಿದ್ದರು. ಆ ಲೇಖನವೇ ನನ್ನೀ ಲೇಖನಕ್ಕೆ ಸ್ಫೂರ್ತಿ. ಕೃಷ್ಣನ್ ರ ಸಮಾಜಸೇವೆಗೆ ಈ ಲೇಖನದ ಓದುಗರು ಸಹಾಯಮಾಡಲೆಂಬ  ವಿನಂತಿಯೊಂದಿಗೆ, ಅವರ ಅಕ್ಷಯ ಟ್ರಸ್ಟ್ ನಿರ್ಗತಿಕರಿಗೆ, ಬಡವರಿಗೆ, ನೊಂದವರಿಗೆ ಅಕ್ಷಯ ಪಾತ್ರೆಯಾಗಲೆಂಬುದು ಈ ಲೇಖನದ ಆಶಯ. 

ಅಕ್ಷಯ ಟ್ರಸ್ಟ್ ವೆಬ್ ವಿಳಾಸ : http://www.akshayatrust.org/ 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ